ಬೆಂಗಳೂರಿನಲ್ಲಿ ಮನೆ ಪಕ್ಕದಲ್ಲೇ ಕೋವಿಡ್ ಕೇರ್; ಓಯೋ ಆರೈಕೆ ಕೇಂದ್ರ ಉದ್ಘಾಟಿಸಿದ ಡಿಸಿಎಂ | ಜನತಾ ನ್ಯೂಸ್
ಬೆಂಗಳೂರು : ತಮ್ಮ ಮನೆಯ ಅಕ್ಕಪಕ್ಕದಲ್ಲೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಹೋಟೆಲ್ ನಲ್ಲಿ ಆರಂಭಿಸಲಾಗಿರುವ "ಓಯೋ ಕೋವಿಡ್ ಕೇರ್ ಸೆಂಟರ್"ಗೆ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಗಳವಾರ ಉದ್ಘಾಟನೆ ಮಾಡಿದರು.
ಗಿವ್ ಇಂಡಿಯಾ, ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್ ಫಾರ್ ಯುವರ್ಸ್ ಮತ್ತು ಒಯೋ ಹೋಟೆಲ್ಸ್ನವರು ಸೇರಿ ಸಂಯುಕ್ತವಾಗಿ ಮಾಡಿರುವ ಈ ವ್ಯವಸ್ಥೆಯೂ ಪ್ರಾಯೋಗಿಕವಾಗಿ ನಗರದ ಕಲ್ಯಾಣನಗರದಲ್ಲಿ ಆರಂಭವಾಗಿದ್ದು, ಇದು ಯಶಸ್ವಿಯಾದರೆ ಓಯೋ ಹೋಟೆಲ್ಸ್ನವರ ಜತೆ ಒಡಂಬಡಿಕೆ ಮಾಡಿಕೊಂಡು ಅವರು ಎಲ್ಲೆಲ್ಲಿ ಹೋಟೆಲ್ ಚೈನ್ ಹೊಂದಿದ್ದಾರೆಯೋ ಅಲ್ಲೆಲ್ಲ ಕೋವಿಡ್ ಕೇಂದ್ರಗಳನ್ನು ತೆರೆಯಲಾಗುವುದು. ಗ್ರಾಮೀಣ ಭಾಗದ ಹೋಟೆಲ್ ಗಳಲ್ಲಿ ಯೂ ಈ ರೀತಿಯ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಒಂದು ಖಾಸಗಿ ವ್ಯವಸ್ಥೆ ಅದೆಷ್ಟು ಪರಿಣಾಮಕಾರಿಯಾಗಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಡಾ.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.
ಸದ್ಯಕ್ಕೆ ಕಲ್ಯಾಣನಗರದ ಕೋವಿಡ್ ಕೇರ್ನಲ್ಲಿ 20 ಬೆಡ್ಗಳಿದ್ದು, ಅಕ್ಕಪಕ್ಕದಲ್ಲಿ ಯಾರಾದರೂ ಸೋಂಕಿತರಿದ್ದರೆ ಇಲ್ಲಿ ಬಂದು ಚಿಕಿತ್ಸೆ ಪಡೆಯಬಹುದು ಎಂದರು.